ಲೇಖಕರು: ಎಂ.ಆರ್. ಗುರುಪ್ರಸಾದ್, ರೂಪಾ ಗುರು ಪ್ರಸಾದ್
ಮೊದಲ ಮುದ್ರಣ: 2023
ಪುಟಗಳು: 120
ಬೆಲೆ: 150.00
ಪ್ರಕಾಶನ: ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು 40
**************
ವ್ಯಕ್ತಿತ್ವ ವಿಕಸನ ಸಾಹಿತ್ಯದ ಹೆಸರಿನಲ್ಲಿ ನಿರಂತರವಾಗಿ ಪ್ರಕಟವಾಗುತ್ತಿರುವ `ಸುಳ್ಳು’ ಮತ್ತು `ಅರೆಸತ್ಯ’ ಪುಸ್ತಕಗಳಿಗಿಂತ ಭಿನ್ನವಾಗಿರುವುದೇ ರೂಪಾ ಮತ್ತು ಗುರುಪ್ರಸಾದರ ಪುಸ್ತಕದ ವಿಶಿಷ್ಟತೆ.
ಈ ಪುಸ್ತಕ- ನಿಮ್ಮ ಬಗ್ಗೆಯಾಗಲಿ, ಜಗತ್ತಿನ ಬಗ್ಗೆಯಾಗಲಿ ಒಂದು ಸುಳ್ಳನ್ನೂ ಹೇಳುವುದಿಲ್ಲ. ಯಾವ ಚಿಲ್ಲರೆ ಭರವಸೆ, ರಂಜಕ ಸಾಂತ್ವನವನ್ನು ಕೂಡ ನೀಡುವುದಿಲ್ಲ.
ನೀವು ವಿಕಾಸಗೊಳ್ಳಬೇಕಾದರೆ ನಿಮ್ಮನ್ನು ನೀವೇ ನೋಡಿಕೊಳ್ಳಿ. ಹೊರಗಿನ ಜಗತ್ತನ್ನು ಕೂಡ ನೋಡಿ, ಸಹಜೀವಿಗಳನ್ನು ಕೂಡ ಗಮನಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತದೆ.
ನೀವು ಕಂಡದ್ದರ ಬಗ್ಗೆ ಕನಸಿಸುತ್ತಿರುವುದರ ಬಗ್ಗೆ ಸತ್ಯಕ್ಕೆ ಹತ್ತಿರವಾಗಿರಿ. ನಿಮ್ಮ ಪಯಣ ಒಂದೇ ದಿನದಲ್ಲಿ ಮುಗಿಯುವುದಿಲ್ಲ. ಗುರಿ ತಲುಪುವುದಕ್ಕಿಂತ ಮುಖ್ಯವಾದದ್ದು ಪಯಣದ ಪ್ರತಿ ಹೆಜ್ಜೆ. ಪ್ರತಿ ಹೆಜ್ಜೆ ಕಲಿಸುವ ಪಾಠ, ನೀಡುವ ಸಂತೋಷ-ತಿಳುವಳಿಕೆ ಎಂಬುದನ್ನೆಲ್ಲ ನಿಮಗೆ ಉಪದೇಶಿಸಲು ಹೋಗುವುದಿಲ್ಲ, ನೆನಪಿಸುತ್ತದೆ. ಹಾಗೆ ನೆನಪಿಸುವುದರಲ್ಲೂ ಹಠವಿಲ್ಲ. ಪ್ರೀತಿಯಿದೆ, ಕಳಕಳಿಯಿದೆ.
ನಿಮ್ಮನ್ನು ನೀವು ಪ್ರೀತಿಸುವುದೆಂದರೆ- ನಿಮ್ಮ ಬಗ್ಗೆಯೇ ಅನುಕಂಪ ಪಡುವುದಲ್ಲ; ಹಗಲುಗನಸು ಕಾಣುವುದಲ್ಲ. ನಿಮ್ಮ ಬಗ್ಗೆ, ಗುರಿಗಳ ಬಗ್ಗೆ, ಕ್ರಮಿಸುತ್ತಿರುವ ಮಾರ್ಗದ ಬಗ್ಗೆ ಸದಾ ಎಚ್ಚರದಿಂದಿರುವುದು.
ಇದನ್ನೆಲ್ಲ ಹೇಳುತ್ತಿರುವ ರೀತಿಯಿಂದಲೂ ರೂಪಾ ಮತ್ತು ಗುರುಪ್ರಸಾದ್ ಅವರ ಪುಸ್ತಕ ವಿಶಿಷ್ಟವಾಗಿದೆ. ನಿಮ್ಮ ಪಕ್ಕದಲ್ಲಿ ಕುಳಿತು ಕಷ್ಟ-ಸುಖ ಮಾತನಾಡುವವರ ನೆರೆಮನೆಯವರ ಶೈಲಿಯಲ್ಲಿ ಪುಸ್ತಕ ಇದೆ. ಸರಳ, ನೇರ ವಾಕ್ಯಗಳು ದಿನನಿತ್ಯದ ಬದುಕಿನಿಂದ ನೀಡುವ ಉದಾಹರಣೆಗಳು ಪುಸ್ತಕವನ್ನು ಓದುವ ಸಂತೋಷವನ್ನು ಹೆಚ್ಚಿಸುತ್ತದೆ; ಇನ್ನೊಬ್ಬ ಗೆಳೆಯನೊಡನೆ ಪುಸ್ತಕ ಹಂಚಿಕೊಳ್ಳಲು ಪ್ರೇರೇಪಿಸುತ್ತದೆ.
ಇಂತಹ ಆಪ್ತ ಸಂಗತಿಗಳನ್ನು ಓದುಗರಿಗೆ ನಿವೇದಿಸಲು ಬೇಕಾದ, ಎಲ್ಲರಿಗೂ ಹಿತವೆನಿಸುವಂತಹ ಕನ್ನಡದ ಶೈಲಿಯೊಂದನ್ನು ಕಂಡುಕೊAಡಿರುವುದು ರೂಪಾ ಮತ್ತು ಗುರುಪ್ರಸಾದರ ಇನ್ನೊಂದು ಹೆಗ್ಗಳಿಕೆ.
ಪುಸ್ತಕ ಓದಿದ ಮೇಲೆ ನಿಮ್ಮ¯್ಲÁಗುವ ಬದಲಾವಣೆಗಳ ಜೊತೆಗೆ ನೀವು ರೂಪಾ ಮತ್ತು ಗುರುಪ್ರಸಾದರನ್ನು ಕೂಡ ಖಂಡಿತವಾಗಿ ಅಭಿನಂದಿಸುತ್ತೀರಿ.
- ಕೆ. ಸತ್ಯನಾರಾಯಣ
ಕಥೆಗಾರ