ಚನ್ನಪ್ಪ ಅಂಗಡಿ ಅವರ ಕಥಾ ಸಂಕಲನ. ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಜೋಗಿ ಅವರು, "ಭೂಮಿ ಮತ್ತು ಬದುಕಿನ ನಡುವಿನ ಸಂಬಂಧವನ್ನು ಹುಡುಕುತ್ತಲೇ ಅವರು ಆಧುನಿಕತೆ ಮತ್ತು ಪ್ರಾಚೀನ ರಹಸ್ಯಗಳ ಸುಳಿವನ್ನೂ ಹುಡುಕಲು ಹೊರಡುತ್ತಾರೆ. ಇದನ್ನು ಅವರು ಕಥನವನ್ನಾಗಿ ನಿರೂಪಿಸುವಲ್ಲಿ ತೋರಿಸುವ ಜಾಣ್ಮೆ ಕೌಶಲ ಈ ಕತೆಗಳನ್ನು ಹೊಸದಾಗಿಸಿವೆ. ಆರಂಭದಲ್ಲೇ ಬರುವ 'ಹಲೋ' ಎಂಬ ಕತೆಯ ವಸ್ತುವೇ ಕತೆಯ ಶಕ್ತಿ, ಇಲ್ಲಿ ಕತೆಯೆಂಬುದಿಲ್ಲ. ಕತೆಯೆಂಬುದಿದೆ ಎಂಬ ಮಾಯಾಲೋಕವ ಸೃಷಿಸಬಲ್ಲ ಚನ್ನಪ್ಪ, ಕತೆ ತಾನಾಗಿ ಏನನ್ನೂ ಹೇಳದೇ, ಅದಾಗಿಯೇ ಎಲ್ಲವನ್ನೂ ಧ್ವನಿಸುವಂತೆ ಮಾಡಬಲ್ಲರು. ಕೇವಲ ಮಾತುಗಳಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿರುವವರ ಜಗತ್ತಿನ ಹಾಗೆಯೇ, ಸತ್ಯ ಬಿಡದ ಸೂದ್, ಸುಳ್ಳಾಡದ ತಂದೆಯವರ ನಡುವೆ ಭೂತ ಭವಿಷ್ಯಗಳ ನಡುವಿನ ಸುಳಿಯಲ್ಲಿ ಸಿಲುಕಿರುವ ಕಥಾನಾಯಕನ ತುಮುಲವೂ ಇದೆ. ಈ ಭೂಮಿಯ ಬೆರಗುಗಳನ್ನು ವಿಜ್ಞಾನ ಮತ್ತು ಜನಪದ ಗ್ರಹಿಕೆ ಹೇಗೆ ಅರ್ಥ ಮಾಡಿಕೊಳ್ಳುತ್ತದೆ ಮತ್ತು ಅವೆರಡರ ನಡುವಿರುವ ವ್ಯತ್ಯಾಸಗಳೇನು ಅನ್ನುವುದನ್ನೂ ಹೇಳದೆಯೇ ಹೇಳುತ್ತದೆ’ ಎನ್ನುತ್ತಾರೆ. ಸರಳವಾದ ಕತೆಗಳೂ ಹೊಸ ಹೊಳಹಿನ ಪ್ರಸಂಗಗಳೂ ಇರುವಂಥ ಈ ಸಂಕಲನದ ಶಕ್ತಿಯೆಂದರೆ ಚನ್ನಪ್ಪ ಅಂಗಡಿಯವರ ನಿರೂಪಣಾ ಕ್ರಮ. ಎಲ್ಲೂ ಉದ್ವಿಗ್ನಗೊಳ್ಳದೇ, ಅವಸರಿಸದೇ, ತಾನು ಹೇಳಬೇಕಾದ್ದನ್ನು ಹೇಳಿಯ ಸಿದ್ಧ ಎಂಬ ನಿಷ್ಟುರ ನಿಲುವಿನೊಂದಿಗೆ ಅವರು ಕತೆಗಳೊಡನೆ ಮಾತನಾಡತೊಡಗುತ್ತಾರೆ.