ತಮ್ಮ ‘ದೇವರು ಕಚ್ಚಿದ ಸೇಬು’ ಸಂಕಲನದ ಬಳಿಕ ಒಂದು ಸಾವಧಾನದ ಅಂತರದ ನಂತರ ಕಥೆಗಾರ ದಯಾನಂದ ಎರಡನೆಯ ಕೃತಿ ‘ಬುದ್ಧನ ಕಿವಿ’ಯನ್ನು ಪ್ರಕಟಿಸುತ್ತಿದ್ದಾರೆ. ಮೊದಲ ಸಂಕಲನದಲ್ಲಿ ಅವರು ತೋರಿದ್ದ ಕಥನ ಪರಿಣತಿ, ಕಟ್ಟೋಣದ ಕುರಿತು ಅವರಿಗಿರುವ ಎಚ್ಚರಗಳು ಇಲ್ಲಿಯೂ ಮುಂದುವರೆದಿವೆ. ಮಾತ್ರವಲ್ಲ, ಕೆಲವೆಡೆ ಹದವಾಗಿ ನೇರ್ಪುಗೊಂಡಿವೆ. ನೈತಿಕತೆ, ಅಸ್ತಿತ್ವದ ಸಂಕಟ ಮತ್ತು ಸಮಾಜದ ಸೋಗಲಾಡಿತನ ಸೃಷ್ಟಿಸುವ ತಳಮಳ, ಮನುಷ್ಯ ಸಂಬಂಧಗಳು ಹುಟ್ಟು ಹಾಕುವ ತಾಕಲಾಟ ದಯಾನಂದರ ಒಟ್ಟೂ ಕಥೆಗಳ ಕೇಂದ್ರ ಕಾಳಜಿಯಾಗಿವೆ.
ಈ ಸಂಕಲನದ ಎದ್ದುಕಾಣುವ ಅಂಶವೆಂದರೆ ನುರಿತ ಕಥೆಗಾರನೊಬ್ಬ ನಿಭಾಯಿಸಬಹುದಾದ ಎಲ್ಲ ರೀತಿಯ ವಸ್ತುಗಳನ್ನೂ ದಯಾನಂದರು ಪ್ರಯೋಗಕ್ಕೆ ಒಡ್ಡಿರುವುದು. ವಸ್ತು ವೈವಿಧ್ಯತೆಯನ್ನು ನಿಭಾಯಿಸುವಲ್ಲಿ ಅವರು ಕೆಲವೆಡೆ ಕಥನ-ಕೃಪೆಯಿಂದ ಯಶಸ್ವಿಯೂ ಆಗಿದ್ದಾರೆ. ಎರಡು ವಿರುದ್ಧ ಶಕ್ತಿ ಅಥವ ವಿಚಾರಗಳ ತಿಕ್ಕಾಟವನ್ನು ಕೂಡ ಈ ಕಥೆಗಳಲ್ಲಿ ಕಾಣಬಹುದು. ಈ ಸಂಘರ್ಷವು ಸಮಕಾಲೀನವಾಗಿದ್ದಾಗ ಅವನ್ನು ಜತನದಿಂದ ನಿಭಾಯಿಸುವುದು ನಿಜಕ್ಕೂ ಸವಾಲಿನ ಕಸುಬು. ಅದನ್ನು ದಯಾನಂದ ಸರ್ವೈವಲ್ ಬೆನಿಫಿಟ್ ಕಥೆಯಲ್ಲಿ ವಿಡಂಬನಾತ್ಮಕ ರೂಪಕದ ಮೂಲಕ, ತ್ರಿಪಾಯಿಂಟ್ ಫೈವ್ ಮತ್ತು ಬುದ್ಧನ ಕಿವಿ, ಬೈಬಲ್ ಬಂಪ್ ಥರದ ಕಥೆಗಳಲ್ಲಿ ಚಾಕಚಕ್ಯತೆಯ ನಿರೂಪಣೆಯ ಮೂಲಕ ಬಹಳ ಸಹಜವಾಗಿ ಸಾಧಿಸಿರುವುದು ಮೆಚ್ಚುಗೆಯ ಅಂಶವಾಗಿದೆ.
ದಯಾನಂದ, ‘ಹೇಳುವ ಕಥೆಗಳಿನ್ನೂ ಬಹಳ ಇವೆ’ ಎಂಬ ಅದಮ್ಯ ಉತ್ಸಾಹದ ಸಹಜ ಪ್ರತಿಭೆಯ ಲೇಖಕ. ಓದುಗನ ಅನುಭವವನ್ನು ಕಥನ ಕುಶಲತೆಯ ಮೂಲಕ ಮೇಲುಸ್ತರಕ್ಕೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ಕಥಿಕ. ಒಬ್ಬ ನೈಜ ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಅರ್ಹತೆ ಬೇಕಿಲ್ಲ.
- ಕೇಶವ ಮಳಗಿ
ಹೆಚ್ಚಿನ ಮಾಹಿತಿಗೆ: www.alecreatives.com/books
ಕತೆಗಾರ ದಯಾನಂದ ಅವರ ಸಂದರ್ಶನ: https://youtu.be/pNTa7YknwfM